ಶಿವಮೊಗ್ಗ: ಎಲ್ಲ ಉದ್ಯಮ ಕ್ಷೇತ್ರಗಳಲ್ಲಿ ಹಣಕಾಸಿನ ವಹಿವಾಟು ಅತಿ ಮುಖ್ಯ ಪಾತ್ರ ವಹಿಸಿದ್ದು, ಬ್ಯಾಂಕ್ಗಳ ಪಾತ್ರ ಕೂಡ ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕ್ಗಳು ಸಕಾಲದಲ್ಲಿ ಸಮರ್ಪಕ ಸೇವೆ ಒದಗಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.
ನಗರದ ದುರ್ಗಿಗುಡಿಯಲ್ಲಿರುವ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಟಿಎಂ ಯಂತ್ರ ಲೋಕಾರ್ಪಣೆಗೊಳಿಸಿ ಮಾತನಾಡಿ, ಬ್ಯಾಂಕ್ಗಳು ನಂಬಿಕೆಗೆ ಪಾತ್ರವಾಗುವ ಜತೆಯಲ್ಲಿ ಉತ್ತಮ ತುರ್ತು ಸೇವೆಗಳನ್ನು ಒದಗಿಸಬೇಕು. ಯೂನಿಟಿ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸೇವೆಗಳ ಮೂಲಕ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕ್ಗಳು ಸೇವೆ ವಿತರಣೆಯಲ್ಲಿ ಸರಳ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಉದ್ಯಮಿ ನಾಗರಾಜ್ ಜಿ.ಆರ್. ಮಾತನಾಡಿ, ಬೇರೆ ಬೇರೆ ಖಾಸಗಿ ಹಣಕಾಸು ಸಂಸ್ಥೆಗಳಿಗಿಂತ ಬ್ಯಾಂಕ್ಗಳು ವ್ಯವಹಾರ ಭದ್ರತೆ ಹಾಗೂ ಸುರಕ್ಷತೆ ಹೊಂದಿದೆ. ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತಿವೆ. ಗ್ರಾಹಕರು ವ್ಯವಹಾರವನ್ನು ಸರಿಯಾಗಿ ಇಟ್ಟುಕೊಂಡು ನಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಎಂ.ಜಿ.ಹೆಗಡೆ ಮಾತನಾಡಿ, ಇಂದು ದೇಶಾದ್ಯಂತ 200ಕ್ಕೂ ಹೆಚ್ಚು ಅಧಿಕ ಎಟಿಎಂ ಸೇವೆಯನ್ನು ಜನರಿಗೆ ಒದಗಿಸಲಾಗುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜತೆಗೆ ಹಲವಾರು ಸೇವೆಗಳನ್ನು ನಾವು ನೀಡುತ್ತಿದ್ದೇವೆ. ವಿಶ್ವಾಸಾರ್ಹ ಸೇವೆ ಒದಗಿಸುತ್ತಿರುವ ಸಂಸ್ಥೆ ಯೂನಿಟಿ ಬ್ಯಾಂಕ್ ಎಂದು ಹೇಳಿದರು.
ಗ್ರಾಹಕ ರವೀಂದ್ರ ಪಾಲ್ಸಿಂಗ್ ಎಟಿಎಂನಲ್ಲಿ ಹಣ ಡೆಪಾಸಿಟ್ ಮಾಡಿದರು. ಸಮಾರಂಭದಲ್ಲಿ ಸಂತೋಷ್ ಕಾಮತ್, ಶಿವರಾಜ್ ಹೊಸೂರ್, ನಾಗರಾಜ.ಎಚ್.ಎನ್. ಹಾಗೂ ಬ್ಯಾಂಕ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.